ಹೊಸದಿಲ್ಲಿ: ಎಲ್ಪಿಜಿ ಸಿಲಿಂಡರ್ ಖರೀದಿಸಲು ಜನರು ಮುಗಿ ಬೀಳುವ ಅಗತ್ಯವಿಲ್ಲ. ಎಂದಿನಂತೆ ಎರಡೂವರೆ ದಿನಗಳಲ್ಲಿ ಪೂರೈಕೆ ಮಾಡಲಾಗುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮ ತಿಳಿಸಿದ್ದಾರೆ. ತಪ್ಪು ಮಾಹಿತಿಯಿಂದ ಭಯ ಭೀತರಾಗಿರುವ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಖರೀದಿಗೆ ಸಾಲುಗಟ್ಟಿ ನಿಂತಿದ್ದಾರೆ. ಆದರೆ ನಮ್ಮ ಸಾಕಷ್ಟು ದಾಸ್ತಾನು ಇರುವುದರಿಂದ ಬೇಡಿಕೆಗೆ ಅನುಸಾರ ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.
ದೇಶದಲ್ಲಿ ಎಲ್ಪಿಜಿ ದಾಸ್ತಾನು ಸಾಕಷ್ಟಿದೆ, ಎರಡೂವರೆ ದಿನಗಳಲ್ಲಿ ಪೂರೈಕೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಾಗರಿಕರಿಗೆ ಭರವಸೆ ನೀಡಿದೆ. ಹೊರ್ಮುಜ್ ಜಲಸಂಧಿಯ ಬದಲಿಗೆ ಅನ್ಯ ಮಾರ್ಗಗಳ ಮೂಲಕ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅನಿಲ ಪೂರೈಕೆ ಮತ್ತಷ್ಟು ಸುಧಾರಿಸಲಿದೆ. ಹೀಗಾಗಿ ಜನರು ಭಯ ಬೀಳುವ ಅಗತ್ಯವಿಲ್ಲ, ಸಿಲಿಂಡರ್ ಗಾಗಿ ಮುಗಿಬೀಳುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದೇವೇಳೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಕಚ್ಚಾ ತೈಲವನ್ನು ಹರ್ಮುಜ್ ಜಲಸಂಧಿಯನ್ನು ಹೊರತು ಪಡಿಸಿ ಅನ್ಯ ಮಾರ್ಗಗಳ ಮೂಲಕ ತರಿಸಿಕೊಳ್ಳಲಾಗುತ್ತಿದೆ. ಸರಕಾರದ ತ್ವರಿತ ಕ್ರಮಗಳಿಂದ ಎಲ್ಜಿಪಿ ತಯಾರಿಕೆಯಲ್ಲಿ ಶೇ. 25ರಷ್ಟು ಏರಿಕೆಯಾಗಿದೆ. ಇದಲ್ಲದೆ ಎಲ್ಪಿಜಿ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.