ಬೈಲಹೊಂಗಲ-ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದು ಕೇಂದ್ರೀಯ ಮಂತ್ರಿಗಳು, ವಿಶ್ವ ಹಿಂದೂ ಪರಿಷತ್ ಹಾಗೂ ರಾಮ ಮಂದಿರದ ನಿರ್ಮಾಣ ಉಸ್ತುವಾರಿಗಳಾದ ಗೋಪಾಲ ಜೀ ಹೇಳಿದರು.
ಅವರು ನಗರದ ಕಿತ್ತೂರು ರಾಣಿ ಚನ್ನಮ್ಮಾಜಿ ಅವರ ಐಕ್ಯ ಸ್ಥಳದ ಮುಂಭಾಗದಲ್ಲಿ ಆಯೋಜಿಸಿದ್ದ ವಿರಾಟ ಹಿಂದೂ ಸಮ್ಮೇಳನದ ದಿಕ್ಕೂಚಿ ಭಾಷಣಕಾರರಾಗಿ ಮಾತನಾಡಿ ಗಂಡುಮೆಟ್ಟಿದ ಬೈಲಹೊಂಗಲ ಪರಾಕ್ರಮಿ ನಾಡಿನಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಬೆಳವಡಿ ಮಲ್ಲಮ್ಮ ಅಮಟೂರು ಬಾಳಪ್ಪ ಇನ್ನು ಅನೇಕ ವೀರರು ಹೋರಾಡಿದ ಪುಣ್ಯ ಭೂಮಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು ಸಂತಸ ತಂದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬಿಧಿ ನಿಮಿತ್ಯ ವಿರಾಟ ಹಿಂದೂ ಸಮ್ಮೇಳನ ಆಯೋಜನೆ ಮಾಡಿದ್ದು ನಾವೆಲ್ಲ ಒಂದು ಎಂಬ ಭಾವನೆ ತರುವುದು ಮುಖ್ಯ ಉದ್ದೇಶವಾಗಿದೆ. ಸಂಘವು ಕಳೆದ ನೂರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದು ಭಾರತ ಹಿಂದೂ ರಾಷ್ಟ್ರ ನಿರ್ಮಿಸುವ ಸಂಕಲ್ಪ ಹೊಂದಿದೆ. ಸಂಘದ ಸಂಸ್ಥಾಪಕ ಡಾ. ಹೆಗಡೆವಾಲ್ ಬಾಲ್ಯದಿಂದಲೇ ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡಿದ್ದರು. ಅವರು ಹುಟ್ಟುಹಾಕಿದ ಸಂಘ ಇಂದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಖೆ ಹೊಂದಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ತಮ್ಮ ಜೀವನನ್ನೇ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟಿದ್ದರು. ಬ್ರಿಟಿಷರ ಆದೇಶವನ್ನು ದಿಕ್ಕರಿಸಿ ಶಾಲೆಯಲ್ಲಿ ವಂದೇ ಮಾತರಂ ಗೀತೆ ಹಾಡಿದ ಕೀರ್ತಿಗೆ ಡಾ. ಹೆಗಡೆವಾಲ್ ಪಾತ್ರರಾಗಿದ್ದರು.
ಇಂತಹ ದೇಶಪ್ರೇಮವನು ಇಂದಿನ ಪೀಳಿಗೆಯಲ್ಲಿ ಬಿತ್ತುವುದು ಅನಿವಾರ್ಯವಾಗಿದೆ. ಹಿಂದೂ ಸಮಾಜ್ಯೋತ್ಸವವು ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜ ಏಕತೆ, ಸಂಸ್ಕೃತಿ, ಉಳಿವು ಹಾಗೂ ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ಭಾವನೆ, ಶಾಂತಿ ಮತ್ತು ಸಹಕಾರವನ್ನು ಬೆಳೆಸುತ್ತದೆ ಎಂದರು.
ಭಾಷೆ,ವೇಷ, ಪ್ರಾಂತ್ಯ, ಪಂಥ, ಪಕ್ಷ,ಪೂಜೆ,ವೈವಿಧ್ಯಗಳಲ್ಲಿ ಏಕತೆ ಸಾರುವ ದೇಶ ನಮ್ಮದಾಗಿದೆ. ದೇಶಭಕ್ತರ ದನಿಗೂಡಿಸಿ ದೇಶದ್ರೋಹಿಗಳ ಹಿಮ್ಮೆಟ್ಟಿಸಬೇಕು.ಮೇಲು ಕೀಳು ಭಾವನೆ ಅಳಿಸಿ ಹಾಕಿ, ಭಯೋತ್ಪಾದನೆ, ಮತಾಂತರ, ಗೋಹತ್ಯೆ ನಿಲ್ಲಿಸಲು ಭದ್ಧರಾಗಬೇಕಿದೆ.
ನಾವೆಲ್ಲರೂ ಹಿಂದೂ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಪಂಚ ಪರಿವರ್ತನೆಗಳಾದ ಸಾಮರಸ್ಯ ಕುಟುಂಬ, ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶೀ ಜೀವನಶೈಲಿ ಹಾಗೂ ನಾಗರೀಕ ಶಿಷ್ಟಾಚಾರ ಇವುಗಳ ಮುಖಾಂತರ ಹಿಂದೂ ಸಮಾಜವನ್ನು ಒಗ್ಗೂಡಿಸಿ ಭಾರತವನ್ನು ವಿಶ್ವದಲ್ಲಿ ವೈಭವಿಕರಿಸೋಣ ಎಂದರು.
ಸಮ್ಮೇಳನದ ಉಪಾಧ್ಯಕ್ಷೆ ಮೀನಾಕ್ಷಿ ಕೂಡಸೋಮಣ್ಣವರ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷ ಅದೃಶ್ಯಪ್ಪ ಸಿದ್ರಾಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಹೊಸೂರಿನ ಗಂಗಾಧರ ಸ್ವಾಮೀಜಿ, ಇಂಚಲ ಪೂರ್ಣಾನಂದ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಜಾಕನಾಯಕನ ಕೊಪ್ಪದ ಮಾತೋಶ್ರೀ ಶಿವಯೋಗಿನಿ ದೇವಿ, ವೀರಯ್ಯ ಹಿರೇಮಠ, ಈಶ್ವರೀಯ ವಿಶ್ವವಿದ್ಯಾಲಯದ ಬಿ. ಕೆ.ಪ್ರಭಾ ಅಕ್ಕನವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ವೇಳೆ ಜಂಗಮ ವಟುಗಳಿಂದ ಮಂತ್ರಘೋಷ ಮೊಳಗಿತು.
ಕು. ಪ್ರಗತಿ ಬಿಳ್ಳೂರ ಅವರಿಂದ ಭರತನಾಟ್ಯ ಜರುಗಿತು.
ಗೌರವಾಧ್ಯಕ್ಷ ನ್ಯಾಯವಾದಿ ಎಂ. ವೈ. ಸೋಮಣ್ಣವರ ಸ್ವಾಗತಿಸಿದರು.
ಗಿರೀಶ ಹರಕುಣಿ ನಿರೂಪಿಸಿ, ವಂದಿಸಿದರು.
ಇದಕ್ಕೂ ಮುಂಚೆ ಬೆಳಗಾವಿ ರಸ್ತೆಯಲ್ಲಿನ ಚನ್ನಮ್ಮಾಜಿ ವೃತ್ತದಲ್ಲಿರುವ ಚನ್ನಮ್ಮಾಜಿ ಅವರ ಅಶ್ವಾರೂಢ ಮೂರ್ತಿಗೆ ಗೌರವ ಸಲ್ಲಿಸಿ, ಗೋ ಪೂಜೆ ಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.
ಚನ್ನಮ್ಮಾಜಿ ವೃತ್ತದಿಂದ ಡೊಳ್ಳು ಮತ್ತು ಕಲಾ ತಂಡದೊಂದಿಗೆ ಶೋಭಾ ಯಾತ್ರೆಯು ಎಪಿಎಂಸಿ, ಇಂಚಲ ಕ್ರಾಸ್,ಕೇಂದ್ರ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ವೇದಿಕೆ ತಲುಪಿತು.
ಈ ಸಂದರ್ಭದಲ್ಲಿ ವಿರಾಟ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯ ಕಾರ್ಯದರ್ಶಿ ಪ್ರಮೋದ ಕುಮಾರ ವಕ್ಕುಂದಮಠ, ಉಪಾಧ್ಯಕ್ಷ ಮಡಿವಾಳಪ್ಪ ಹೋಟಿ,ಸುಭಾಷ್ ಬಾಗೇವಾಡಿ, ಮಹಾಂತೇಶ ಗದಗ, ಸಹ ಕಾರ್ಯದರ್ಶಿ ಶಂಕರ ಬರಬಳ್ಳಿ, ಶ್ರೀಶೈಲ ಸಿದಮನಿ, ಗಿರೀಶ ಹಲಸಗಿ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮುಖಂಡರು ಹಾಗೂ ಸಾವಿರಾರು ಹಿಂದೂ ಭಾಂದವರು ಪಾಲ್ಗೊಂಡಿದ್ದರು.