ಹುತಾತ್ಮ ರೈತ ದಿನಾಚರಣೆ | ರೈತ ಬಂಡಾಯಕ್ಕೆ 43 ವರ್ಷ: ರೈತರಲ್ಲಿ ಕಾಣದ ಒಗ್ಗಟ್ಟು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನರಗುಂದದಲ್ಲಿರುವ ರೈತ ಹುತಾತ್ಮ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು
ನರಗುಂದ: ಬಂಡಾಯ ಎಂದಾಕ್ಷಣ ನೆನಪಾಗುವುದು ನರಗುಂದ ಪಟ್ಟಣ. ಇಲ್ಲಿ 1980 ಜುಲೈ 21ರಂದು ನಡೆದ ರೈತ ಬಂಡಾಯದ ಪರಿಣಾಮ ದೇಶವೇ ಇತ್ತ ನೋಡುವಂತಾಯಿತು. ಅನೇಕ ರೈತ ಚಳವಳಿಗಳಿಗೆ ನಾಂದಿಗೆ ಕಾರಣವಾಯಿತು.

ಈ ರೈತ ಬಂಡಾಯಕ್ಕೆ 43 ವರ್ಷ. ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು ಬಳಿ ಹುತಾತ್ಮ ರೈತ ದಿನಾಚರಣೆಗಾಗಿ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಶುಕ್ರವಾರ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿವೆ. ಆದರೆ ರೈತರ ಬೇಡಿಕೆಗಳು ಹೋರಾಟಕ್ಕೆ ಸೀಮಿತವಾಗಿವೆ. ಮತ್ತೇ ಬಂಡಾಯ ನಡಿದೀತು ಎಂಬ ಕೂಗು ಪ್ರತಿವರ್ಷ ಪ್ರತಿಧ್ವನಿಸುತ್ತಲೇ ಇದೆ. ಆದರೆ ಅಬ್ಬರ ಈಗ ಇಲ್ಲವಾಗಿದೆ.
ರೈತ ನಾಯಕರು ಹುತಾತ್ಮ ರೈತನ ವೀರಗಲ್ಲಿಗೆ ಮಾಲಾರ್ಪಣೆ ಮಾಡಲು ಬರುತ್ತಿದ್ದಾರೆ. ಈ ದಿನ ಹಸಿರು ಟಾವೆಲ್ ಹೊತ್ತ ಹಿರಿಯ, ಕಿರಿಯ ನಾಯಕರ ಸಮಾಗಮಕ್ಕೆ ವೇದೀಕೆಯಾಗಲಿದೆ. ಆದರೆ ನಿಜವಾದ ರೈತ ಮೂಲ ಸೇರುವಂತಾಗಿದೆ.
ದಿನಾಚರಣೆ ಹಿನ್ನೆಲೆ: ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಬಾಳು ಹಸನಾಗಬೇಕೆಂದು ನೀರಾವರಿ ಸೌಲಭ್ಯ ಒದಗಿಸಲು ಮಲಪ್ರಭಾ ನದಿಗೆ ಸವದತ್ತಿ ಬಳಿಯ ನವಿಲುತೀರ್ಥದಲ್ಲಿ ಆಣೆಕಟ್ಟು ನಿರ್ಮಾಣವಾಯಿತು. ಆದರೆ ಇದಕ್ಕೆ ಪ್ರತಿಯಾಗಿ ರೈತರ ಮೇಲೆ ಸರ್ಕಾರ ಬೆಟರ್‍ಮೆಂಟ್ ಲೆವಿ (ಅಭಿವೃದ್ಧಿ ಕರ) ಹೇರಿತು.

ಕಾಲುವೆಗಳಿಗೆ ನೀರು ಹರಿಯದಿದ್ದರೂ ಕರ ತುಂಬಬೇಕಿತ್ತು. ಇದನ್ನು ಭರಿಸದೇ ಇದ್ದಾಗ ರೈತರ ಪಹಣಿ ಪತ್ರಿಕೆ ಮೇಲೆ ಸರ್ಕಾರಿ ಎಂದು ನಮೂದಿಸಿತು. ಇದರಿಂದ ಸರ್ಕಾರಿ ಸಾಲ, ವಿವಿಧ ಸೌಲಭ್ಯಗಳಿಂದ ರೈತರು ವಂಚಿತರಾಗಬೇಕಾಯಿತು. ಇದನ್ನು ವಿರೋಧಿಸಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶದಲ್ಲಿ 21 ಸದಸ್ಯರ ನೇತೃತ್ವದಲ್ಲಿ ನಿರಂತರ ಹೋರಾಟ ಆರಂಭವಾಯಿತು.

ಇದರಲ್ಲಿ ರಾಜಶೇಖರಪ್ಪ ಹೊಸಕೇರಿ, ಶಿವಪ್ಪ ಬಾಳಿಕಾಯಿ, ಬಸವರಾಜ ಪಟ್ಟೇದ, ಶಿವಪ್ಪ ನೆಗಳೂರು, ಶಿವದೇವಗೌಡ ಪಾಟೀಲ, ಬಸಪ್ಪ ಗಾಣಿಗೇರ, ವ್ಹಿ.ಎನ್.ಹಳಕಟ್ಟಿ, ಚಂಬಣ್ಣ ನಂದಿ ಸೇರಿದಂತೆ ಮೊದಲಾದವರಿದ್ದರು. ಈ ರೈತರ ಹೋರಾಟಕ್ಕೆ ಸರ್ಕಾರ ಮಣಿಯಲಿಲ್ಲ. 1980 ಜುಲೈ ತಿಂಗಳಲ್ಲಿ ನರಗುಂದದ ತಹಶೀಲ್ದಾರ್ ಕಚೇರಿ ಎದುರು ರೈತರು ಸರಣಿ ಉಪವಾಸ ಆರಂಭಿಸಿದರು. ಬೇಡಿಕೆಗೆ ಸ್ಪಂದನೇ ಸಿಗಲಿಲ್ಲ. ಹೋರಾಟ ಹಿಂಸಾರೂಪ ತಾಳಿತು. ಜುಲೈ 21ರಂದು ನಡೆದ ಧರಣಿ ಸಂದರ್ಭದಲ್ಲಿ ರೈತರು ಅಧಿಕಾರಿಗಳ ಪ್ರವೇಶ ನಿರಾಕರಿಸಿ ತಹಶೀಲ್ದಾರ್ ಕಚೇರಿ ಎದುರು ಅಡ್ಡವಾಗಿ ಮಲಗಿದರು.

ಅಂದಿನ ತಹಶೀಲ್ದಾರ್ 'ವರೂರು' ಎಂಬುವವರು ರೈತರನ್ನು ತುಳಿದುಕೊಂಡೇ ಕಚೇರಿ ಒಳಗೆ ಹೋದರು. ಇದರಿಂದ ಆಕ್ರೋಶಗೊಂಡ ರೈತರು ತಹಶೀಲ್ದಾರ್‌ಗೆ ಥಳಿಸಿದರು. ಆಗ ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಗುಂಡು ಹಾರಿಸಿದರು. ಗೋಲಿಬಾರ್ ನಡೆದ ನರಗುಂದ ತಾಲ್ಲೂಕು ಚಿಕ್ಕನರಗುಂದದ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು.

ಇದರಿಂದಾಗಿ ಅಂದಿನ ಗುಂಡುರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಯಿತು. ಬೆಟರ್‍ಮೆಂಟ್ ಲೆವಿ (ಸುಧಾರಣಾ ಕರ)ರದ್ದಾಯಿತು. ಲೆವಿ ರದ್ದಾಗಿದ್ದು ಬಿಟ್ಟರೆ ಉಳಿದ ರೈತರ ಸಮಸ್ಯೆ ಮಾತ್ರ ಹಾಗೆ ಉಳಿದಿವೆ. ಮಹದಾಯಿ, ಕಳಸಾ ಬಂಡೂರಿಗೂ ಹೋರಾಟ ನಡೆಯುತ್ತಲೇ ಇದೆ. ನೀರು ಹಂಚಿಕೆ, ಅಧಿಸೂಚನೆ, ಟೆಂಡರ್ ಪ್ರಕ್ರಿಯೆ ಎನ್ನುತ್ತಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ, ರಾಜಕೀಯ ಪಕ್ಷಗಳು ಕಾಲಹರಣ ಮಾಡುತ್ತಲೇ ಇವೆ.ಮಲಪ್ರಭೆಗೆ ಮಹದಾಯಿ ನೀರು ಹರಿಯುತ್ತಿಲ್ಲ. ಇದರಿಂದ ರೈತರೇ ಹೋರಾಟದಿಂದ ದೂರ ಉಳಿಯುವಂತಾಗಿದೆ

ರೈತಸಂಘಟನೆ ಕಿಚ್ಚು: ರೈತ ಬಂಡಾಯದ ಪರಿಣಾಮ ಕರ್ನಾಟಕದಲ್ಲಿ ರೈತ ಹೋರಾಟ ಹಾಗೂ ರೈತ ಸಂಘ ಉಗಮವಾಗಲು ಕಾರಣವಾಯಿತು. ರೈತ ಬಂಡಾಯ ಅನೇಕ ದಾಖಲೆಗಳಿಗೆ ಸಾಕ್ಷಿಯಾಯಿತು. ಅನೇಕ ರೈತ ಸಂಘಗಳು, ಸಮಿತಿಗಳು ಹುಟ್ಟಿಕೊಂಡವು, ಹೋರಾಟ ನಡೆಸಿದವು. ಆದರೂ ಈ ಭಾಗದ ರೈತರ ಕನಸು ನನಸಾಗುತ್ತಿಲ್ಲ. ಕಳಸಾ ಬಂಡೂರಿ, ಮಹದಾಯಿ ಹೋರಾಟ ನಡೆಯುತ್ತಲೇ ಇದೆ.

ಈಚೆಗಷ್ಟೇ 9ನೇ ವರ್ಷಕ್ಕೆ ಕಾಲಿಟ್ಟಿದೆ. ಮಾಲಾರ್ಪಣೆಗೆ ತಾ ಮುಂದು ನಾ ಮುಂದು ಎನ್ನುತ್ತಾ ನೂಕು ನುಗ್ಗಲು ಸಾಮಾನ್ಯವಾಗಿದೆ. ಸಮಸ್ಯೆ ಮಾತ್ರ ಹಾಗೇ ಉಳಿದಿವೆ. ಇದಕ್ಕೆ ಮತ್ತೊಮ್ಮೆ ಬಂಡಾಯ ನಡೆಯಲೇಬೇಕೆಂಬ ಧ್ವನಿ ಮೂಡುತ್ತಲೇ, ಮರೆಯಾಗುತ್ತಲೇ ಇದೆ. ಆದರೆ ರೈತರ ಬಾಳು ಮಾತ್ರ ಹಸನಾಗುತ್ತಿಲ್ಲ. ಮಹದಾಯಿ ಅನುಷ್ಠಾನ ಗೊಳ್ಳುತ್ತಿಲ್ಲ.

ಸ್ಮಾರಕವಿಲ್ಲ: 43 ವರ್ಷಗಳಾದರೂ ದಿ.ವೀರಪ್ಪ ಕಡ್ಲಿಕೊಪ್ಪರ ವೀರಗಲ್ಲು ಖಾಸಗಿಯವರ ಜಾಗದಲ್ಲಿಯೇ ಇದೆ. ಅವರ ಹೆಸರಲ್ಲಿ ಇಲ್ಲಿಯವರೆಗೂ ಒಂದು ಸ್ಮಾರಕವಿಲ್ಲ. ಬೇಡಿಕೆ ಈಡೇರಿಸಿಕೊಳ್ಳಬೇಕೆಂದರೆ ರೈತರಲ್ಲಿ ಒಗ್ಗಟ್ಟು ಕಾಣುತ್ತಿಲ್ಲ ಎಂದು ರೈತ ಹೋರಾಟಗಾರ ವಿಜಯ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

Post a Comment

0Comments

Post a Comment (0)