ಮಹರ್ಷಿ ವಾಲ್ಮೀಕಿ ಅವರು ಭಾರತದ ಸಂಸ್ಕತಿ, ಪರಂಪರೆಯನ್ನು ಜಗತ್ತಿಗೇ ಪರಿಚಯಿಸಿಕೊಟ್ಟ ಶ್ರೇಷ್ಠ ಕವಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಏರ್ಪಡಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣ ಮಹಾಕಾವ್ಯವನ್ನು ಇಡೀ ವಿಶ್ವವೇ ತಲೆದೂಗುವಂತೆ ಸುಂದರವಾಗಿ ರಚಿಸಿ, ಭಾರತ ಅಷ್ಟೇ ಅಲ್ಲ; ಜಗತ್ತಿಗೇ ಶ್ರೀರಾಮನ ಆದರ್ಶ ವ್ಯಕ್ತಿತ್ವವನ್ನು ಪರಿಚಯಿಸಿಕೊಡುವ ಕಾರ್ಯ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ ಅವರ ಮೂಲಕ ಆಗಿದೆ ಎಂದು ವಿವರಿಸಿದರು.
ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಈಚೆಗೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಮಾಡಿದ್ದಾರೆ. ಅಲ್ಲಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ಇಟ್ಟಿರುವುದು ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶ ಅದನ್ನು ಹೆಮ್ಮೆ ಪಡುತ್ತಿದೆ ಎಂದು ತಿಳಿಸಿದರು.
*ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿಯ ಹಗರಣ*
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಪಂಗಡಗಳ ಕುರಿತು ಉದ್ದುದ್ದ ಭಾಷಣ ಬಿಗಿಯುತ್ತಾರೆ. ಆದರೆ, ಅಹಿಂದ ಸಮುದಾಯಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಯಾವ ರೀತಿ ಆಡಳಿತ ನಡೆಸುತ್ತಿದೆ? ಎಂದು ಸುಭಾಷ್ ಪಾಟೀಲ ಅವರು ಕೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಮೊತ್ತದ ಹಗರಣ ನಡೆದಿದೆ. ಪರಿಶಿಷ್ಟ ಪಂಗಡಕ್ಕೆ, ಆ ಸಮುದಾಯದ ಯುವಜನತೆಗೆ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕಿದ್ದ ಉಪಯೋಗ ಆಗಬೇಕಿದ್ದ ಹಣವನ್ನು ಲೂಟಿ ಮಾಡಿ, ತೆಲಂಗಾಣಕ್ಕೆ ಒಯ್ದು ಅಲ್ಲಿ ಸಾವಿರಾರು ಖಾತೆಗೆ ಹಣ ವರ್ಗಾಯಿಸಿ ದುರುಪಯೋಗ ಮಾಡಿದ್ದರು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ್ ಕೊಲಕಾರ, ಬಿಜೆಪಿ ಮಹಾನಗರ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ, ರಂಜಿತ ಕಲಾಲ, ಮಂಜುನಾಥ ಅಷ್ಟಗಿ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು