ಬೈಲಹೊಂಗಲ: ಬೈಲಹೊಂಗಲ ನಗರದ ಮೂರುಸಾವಿರ ಮಠದ ಲಿಂಗೈಕ್ಯ ನೀಲಕಂಠೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಕಾರ್ಯಕ್ರಮವು ಮಹಾಶಿವರಾತ್ರಿಯ ದಿನದಂದು ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಮಹಾ ರಥೋತ್ಸವವನ್ನು ವಿಜೃಂಭಣೆಯಿಂದ ಶೃಂಗರಿಸಲಾಗಿತ್ತು, ಪಟ್ಟಣದ ಜೋಡಿ ಕೂಟದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನೆರವೇರಿತು.
ಮಠದ ಪೀಠಾಧಿಪತಿಗಳು ಪ್ರಭುನೀಲಕಂಠ ಸ್ವಾಮೀಜಿ, ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ ಹೊಸೂರು ಗಂಗಾಧರ ಸ್ವಾಮೀಜಿ, ಡಾ//ವೀರಯ್ಯ ಸ್ವಾಮೀಜಿ ಬಗಳಾಂಬಿಕೆ ಮಠ ಬೈಲಹೊಂಗಲ, ವಿಶ್ವನಾಥ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಭಕ್ತರು ಹರ ಹರ ಮಹಾದೇವ, ನೀಲಕಂಠ ಮಹಾಶಿವಯೋಗಿ, ಹಾನಗಲ್ ಕುಮಾರ ಸ್ವಾಮಿ, ಗಂಗಾಧರ ಸ್ವಾಮೀಜಿ ಅವರಿಗೆ ಜೈ ಎಂದು ಘೋಷಣೆ ಕೂಗಿದರು. ವಿವಿಧ ವಾದ್ಯ ಮೇಳಗಳು ರಥೋತ್ಸವದ ಮೆರಗು ಹೆಚ್ಚಿಸಿದವು. ರಥೋತ್ಸವ ಜವಳಿ ಕೂಟದಿಂದ ಉಪ್ಪಿನ ಕೂಟ ವರೆಗೆ ಸಾಗಿ ಮರಳಿ ಜವಳಿ ಕೂಟಗೆ ಬಂದು ತಲುಪಿತು. ನೀಲಕಂಠೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ಮಠದ ಭಕ್ತರು ಪಾಲ್ಗೊಂಡಿದ್ದರು.