ಅಹ್ಮದಾಬಾದ್: ಇನ್ನೇನು ಹೊರಬಿದ್ದಿತು ಎಂಬಂಥ ಸ್ಥಿತಿಯಿಂದ ಫಿನಿಕ್ಸ್ನಂತೆ ಮರುಹುಟ್ಟು ಪಡೆದ ರಾಯಲ್ ಚಾಲೆಂಜರ್ ಬೆಂಗಳೂರು ಒಂದೆಡೆಯಾದರೆ, ಟೇಬಲ್ ಟಾಪರ್ ಆಗುವ ಅವಕಾಶ ಕಳೆದುಕೊಂಡು ಸತತ ಸೋಲಿನ ಆಘಾತಕ್ಕೆ ಸಿಲುಕಿರುವ ರಾಜಸ್ಥಾನ್ ರಾಯಲ್ಸ್ ಇನ್ನೊಂದೆಡೆ. ಈ ಎರಡು ತಂಡಗಳು ಬುಧವಾರ ಎಲಿಮಿನೇಟರ್ ಸ್ಪರ್ಧೆಗೆ ಇಳಿಯಲಿವೆ. ಗೆದ್ದ ತಂಡ ಮುನ್ನಡೆದರೆ, ಸೋತವರು ಮನೆಗೆ ಹೋಗಲಿದ್ದಾರೆ.
ಮೊದಲ 8 ಪಂದ್ಯಗಳಲ್ಲಿ ಏಳನ್ನು ಸೋತು ನಿರ್ಗಮನ ಬಾಗಿಲಿಗೆ ಬಂದಿದ್ದ ಡು ಪ್ಲೆಸಿಸ್ ಪಡೆ, ಅನಂತರ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ತಲುಪಿದ ಸಾಹಸ “ಎಲ್ಲ ಮುಗಿಯಿತು’ ಎಂದು ಕೈಬಿಟ್ಟವರಿಗೊಂದು ಸ್ಫೂರ್ತಿ. ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯನ್ನು ಲೆಕ್ಕಾಚಾರದ ಆಟದ ಮೂಲಕ ಹೊರದಬ್ಬಿದ ಬೆಂಗಳೂರು ತಂಡ ಈ ಬಾರಿ ಅಸಾಧ್ಯವಾದುದನ್ನು ಸಾಧಿಸಲು ಹೊರಟಿದ್ದು ಸ್ಪಷ್ಟ. ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿಯೇ ಫೇವರಿಟ್ ಎಂಬುದರಲ್ಲಿ ಅನುಮಾನವಿಲ್ಲ.